ಪುನೀತ್ ರಾಜ್ ಕುಮಾರ್ ಅವರ ದೇಹ ನಮ್ಮಿಂದ ದೂರವಾಗಿರಬಹುದು, ಆದರೆ ಅವರು ಮಾಡಿರುವ ಒಳ್ಳೆಯ ಕಾರ್ಯಗಳು ಅವರನ್ನು ಇಂದಿಗೂ ಕರ್ನಾಟಕದ ಜನರ ಮನೆ-ಮನದಲ್ಲಿ ಜೀವಂತವಾಗಿರಿಸಿದೆ. ಬದುಕಿದ್ದಾಗ ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಒಳ್ಳೆಯ ಕೆಲಸಗಳು ಅಷ್ಟಿಷ್ಟಲ್ಲ. ಅವರು ನಡೆಸುತ್ತಿದ್ದ ವೃದ್ಧಾಶ್ರಮಗಳ ಬಗ್ಗೆ, ಅನಾಥಾಶ್ರಮಗಳ ಬಗ್ಗೆ, ಗೋಶಾಲೆಗಳ ಬಗ್ಗೆ ಇದುವರೆಗೆ ಯಾರಿಗೂ ತಿಳಿದಿರಲಿಲ್ಲ. ಬಲಗೈ ಮಾಡುವ ದಾನ ಎಡಗೈಗೆ ತಿಳಿಯಬಾರದು ಎಂಬ ತತ್ವವನ್ನು ಪುನೀತ್ ಅವರು ಅನುಸರಿಸಿದ್ದಾರೆ. ತಮ್ಮ ನಿಷ್ಕಲ್ಮಶ ನಟನೆಯಿಂದ ಎಲ್ಲರ ಹೃದಯ ಗೆದ್ದಿದ್ದ ಅಪ್ಪು ಅವರು, ಅವರ ಸಾಮಾಜಿಕ ಸೇವೆಗಳಿಂದ ಇನ್ನೂ ಹೃದಯವನ್ನು ಗೆದ್ದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಅವರ ಎಷ್ಟೋ ಅಭಿಮಾನಿಗಳು ಇಂದಿಗೂ ದುಃಖಿಸುತ್ತಿದ್ದಾರೆ. ಎಷ್ಟೋ ಮನೆಗಳಲ್ಲಿ ಇನ್ನೂ ಸೂತಕದ ಛಾಯೆ ಆವರಿಸಿದೆ. ಪುನೀತ್ ಅವರು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಲು ಆಗುತ್ತಿಲ್ಲ. ಇಂದಿಗೂ ಪುನೀತ್ ಅವರ ಸಮಾಧಿಗೆ ಎಷ್ಟೋ ಜನ ಅವರ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನ ಎಷ್ಟೋ ರಸ್ತೆಗಳಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಪುನೀತ್ ಅವರು ತಮ್ಮ ನೇತ್ರಗಳನ್ನು ದಾನ ಮಾಡಿದ್ದರು ಎಂಬ ಸುದ್ದಿಯನ್ನು ತಿಳಿದ ಅನೇಕರು ತಮ್ಮ ನೇತ್ರಗಳನ್ನು ದಾನ ಮಾಡಲು ಮುಂದಾಗಿದ್ದಾರೆ.

ಅಪ್ಪು ಅವರಿಂದ ಪ್ರೇರಣೆಗೊಂಡ ಎಷ್ಟೋ ಜನ, ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಉಚಿತ ಗ್ರಂಥಾಲಯವೊಂದನ್ನು ತೆರೆದು, ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಉಚಿತ ವೈಫೈ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಂತೆಯೇ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣ ಒಂದಕ್ಕೆ ಪುನೀತ್ ರಾಜಕುಮಾರ್ ಅವರ ಹೆಸರು ನಾಮಕರಣ ಮಾಡುವುದಕ್ಕೆ ನಿರ್ಣಯ ತೆಗೆದುಕೊಳ್ಳಲಾಗಿದೆ.

ಹೌದು ಹೊಸಪೇಟೆ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಸಂಕಮ್ಮ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ವಿವಿಧ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು. ನಗರದ ತಹಶೀಲ್ದಾರ ಕಚೇರಿ ಬಳಿಯ 4 ಕೂಡು ರಸ್ತೆಯ ವೃತ್ತಕ್ಕೆ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ರಾಜಕುಮಾರ್ ಅವರ ಹೆಸರು ನಾಮಕರಣ ಮಾಡುವುದಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಒಟ್ಟಾರೆಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೋಟ್ಯಂತರ ಅಭಿಮಾನಿಗಳು ಅವರನ್ನು ದಿನ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ನೆನಪಿಸಿಕೊಂಡು ತಮ್ಮ ಪ್ರೀತಿ ಗೌರವ ಸಲ್ಲಿಸಿ ಅವರನ್ನು ಜೀವಂತವಾಗಿರಿಸಿದ್ದಾರೆ.