ಚಿತ್ರರಂಗದ ಕಿರುತೆರೆ ಮತ್ತು ಚಲನಚಿತ್ರ ನಟ ನಟಿಯರು ತಮ್ಮ ನಟನೆಯ ವೃತ್ತಿಯನ್ನು ಹೊರತು ಪಡಿಸಿ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ತಮ್ಮ ನಟನೆಯ ಬದುಕು ಮತ್ತು ಔದ್ಯಮಿಕ ಜೀವನ ಎರಡುಗಳನ್ನು ಜಾಗರೂಕತೆಯಿಂದ ನಿಭಾಯಿಸಿಕೊಂಡು ಹೋಗುವ ಸೆಲೆಬ್ರಿಟಿಗಳು ಬಹಳ ಜನ ಇದ್ದಾರೆ. ಅದೇ ರೀತಿ ಈಗ ಕನ್ನಡ ಚಿತ್ರರಂಗದ ಕಿರುತೆರೆ ಮತ್ತು ಬೆಳ್ಳಿಪರದೆಯಲ್ಲಿ ನಟಿಸಿ ಹೆಸರಾಗಿದ್ದ ಬಿಗ್ ಬಾಸ್ ಮೂರನೇ ಆವೃತ್ತಿಯ ರನ್ನರ್ ಅಪ್ ಕೂಡ ಆಗಿ ಹೊರಹೊಮ್ಮಿದ್ದ ಚಂದನ್ ಕುಮಾರ್ ಅವರು ದೊಣ್ಣೆ ಬಿರಿಯಾನಿ ಹೋಟೆಲ್ ಒಂದನ್ನು ಆರಂಭಿಸಿದ್ದಾರೆ. ಹೌದು ಬೆಂಗಳೂರಿನ ಸಹಕಾರ ನಗರದಲ್ಲಿ ನಟ ಚಂದನ್ ಕುಮಾರ್ ದೊಣ್ಣೆ ಬಿರಿಯಾನಿ ಪ್ಯಾಲೇಸ್ ಎಂಬ ಹೆಸರಿನ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ.

ನಿನ್ನೆ ನಡೆದ ಈ ವಿಶೇಷ ಉದ್ಘಾಟನಾ ಸಮಾರಂಭಕ್ಕೆ ಚಿತ್ರರಂಗದ ಹಿರಿಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಖ್ಯಾತ ಹಿರಿಯ ನಟಿ ಶ್ರುತಿ ಆಗಮಿಸಿದ್ದರು. ಶಿವಣ್ಣನನ್ನು ನೋಡಲು ಅಭಿಮಾನಿಗಳು ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕಾರ್ಯಕ್ರಮದ ನಂತರ ಶ್ರುತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಂದು ಮಾಲೀಕತ್ವದ ದೊಣ್ಣೆ ಬಿರಿಯಾನಿ ಹೋಟೆಲ್ ಉದ್ಘಾಟನೆ, ಶುಭವಾಗಲಿ ಎಂದು ಹಾರೈಸಿ ಬರೆದಿದ್ದಾರೆ. ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪ್ರವೇಶ ಕೊಟ್ಟ ಚಂದನ್ ಕುಮಾರ್ ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಕನ್ನಡಿಗರ ಮನೆ ಮನದ ಮಾತಾದರು.

ನಂತರ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ ಸೀಸನ್ 3ಅಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ನಲ್ಲಿಯೆ ಶ್ರುತಿ ಹಾಗೂ ಚಂದನ್ ಅವರ ನಡುವೆ ಉತ್ತಮ ಬಾಂಧವ್ಯ ಬೆಳೆದುಬಂತು. ನಂತರ ಲವ್ಯು ಆಲಿಯಾ ಮತ್ತು ಪ್ರೇಮಬರಹ ಎಂಬ ಚಿತ್ರಗಳ ಮೂಲಕ ಬೆಳ್ಳಿಪರದೆಯಲ್ಲಿ ಕೂಡ ಚಂದನ್ ಮಿಂಚಿದರು. ಈಗಾಗಲೇ ಇದೇ ರೀತಿ ನಟ ಶೈನ್ ಶೆಟ್ಟಿ ಅವರು ಕೂಡ ತಮ್ಮ ಉಪಜೀವನಕ್ಕಾಗಿ ಹೋಟೆಲ್ ಉದ್ಯಮ ಆರಂಭಿಸಿದ್ದು ನಮಗೆಲ್ಲರಿಗೂ ಗೊತ್ತಿದೆ, ಇದೀಗ ಚಂದನ್ ಕುಮಾರ್ ಕೂಡ ಹೋಟೆಲ್ ಉದ್ಯಮ ಆರಂಭಿಸಿದ್ದಾರೆ. ಅವರ ಈ ಹೊಸ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸೋಣ.