ಅರಿಹ ಎಂಬ ಟೈಟಲ್ ಬಹಳ ವಿಶಿಷ್ಟವಾಗಿದೆ. ಇನ್ನು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ಈಗಾಗಲೇ ಒಂದಷ್ಟು ಕಿರುಚಿತ್ರಗಳನ್ನ ನಿರ್ದೇಶನ ಮಾಡಿ ಗಮನ ಸೆಳೆದಿರುವ ಯುವ ಉತ್ಸಾಹಿ ನಿರ್ದೇಶಕ ಮೋಹನ್ ಕುಮಾರ್ ಎಚ್. ಈ ಅರಿಹ ಚಿತ್ರದ ಮುಹೂರ್ತ ಅತ್ಯಂತ ಸರಳವಾಗಿ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ನೆರೆವೇರಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ಹಿರಿಯ ನಟಿ ಭವ್ಯ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ಈ ಹೊಸಬರ ತಂಡಕ್ಕೆ ಶುಭ ಹಾರೈಸಿದ್ದಾರೆ. ಜೊತೆಗೆ ನಿರ್ದೇಶಕ ಆದರ್ಶ ಈಶ್ವರಪ್ಪ ಅವರು ಚಿತ್ರಕ್ಕೆ ಕ್ಲಾಪ್ ಮಾಡಿದರು. ಈ ಅರಿಹ ಚಿತ್ರದಲ್ಲಿ ನಾಯಕ ನಟನಾಗಿ ಶ್ರೀ ಅವರು ನಟಿಸುತ್ತಿದ್ದಾರೆ.
ಹೊಸಬರ ಚಿತ್ರದಲ್ಲಿ ಅನುಭವಿ ಕಲಾವಿದರ ಬಹುದೊಡ್ಡ ತಾರಾಗಣವೇ ತುಂಬಿ ತುಳುಕುತ್ತಿದೆ. ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರತಿಭೆಗಳಿಗೆ ಕೊರತೆ ಏನಿಲ್ಲ. ವರ್ಷಕ್ಕೆ ನೂರಾರು ಸಿನಿಮಾಗಳು ತಯಾರಾಗುತ್ತವೆ. ಆದರೆ ಅವುಗಳಲ್ಲಿ ಗೆಲ್ಲುವುದು ಕಡಿಮೆ. ಅದರಲ್ಲಿ ಅಚ್ಚರಿ ಅನಿಸುವುದು ಗೆಲ್ಲುವುದು ಹೊಸಬರ ಸಿನಿಮಾಗಳೇ ಅನ್ನಬಹುದು. ಯಾಕಂದ್ರೆ ಹೊಸ ಪ್ರತಿಭೆಗಳು ಕಂಟೆಂಟ್ ಓರಿಯೆಂಟೆಡ್ ಚಿತ್ರಗಳತ್ತ ಗಮನ ಹರಿಸಿದ್ದಾರೆ. ಹಾಗಂತ ಸ್ಟಾರ್ ಸಿನಿಮಾಗಳು ಕಂಟೆಂಟ್ ಹೊಂದಿರುವುದಿಲ್ಲ ಅಂತಲ್ಲ. ಆದ್ರೆ ಈ ಸ್ಟಾರ್ ನಟರ ಸಿನಿಮಾಗಳಿಗಿಂತ ಕೊಂಚ ಭಿನ್ನವಾಗಿ ಈ ಹೊಸಬರ ಚಿತ್ರದಲ್ಲಿ ಕಂಟೆಂಟ್ ಗಳನ್ನ ಗಮನಿಸಬಹುದು. ಇದೀಗ ಅಂತಹದ್ದೇ ಹೊಸಬರ ತಂಡವೊಂದು ಚಿತ್ರ ಮಾಡಲು ಹೊರಟಿದೆ. ಈ ಚಿತ್ರದ ಹೆಸರು ಅರಿಹ.
ಈ ಹಿಂದೆ ನಟ ಶ್ರೀ ಅವರು ಇರುವುದೆಲ್ಲ ಬಿಟ್ಟು, ಗಜಾನನ ಅಂಡ್ ಗ್ಯಾಂಗ್ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ಕಾಜಲ್ ಕುಂದರ್ ಎಂಬುವರು ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಸನತ್ ಬಣ್ಣ ಹಚ್ಚಿದ್ದಾರೆ. ಸನತ್ ಅವರು ಈ ಹಿಂದೆ ಭೈರವ, ಕಮರೊಟ್ಟು ಪೋಸ್ಟ್, ಒಲವೇ ಮಂದಾರ2. ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಖ್ಯಾತ ನಟರಾದ ಅಚ್ಯುತ್ ಕುಮಾರ್, ಶೋಭರಾಜ್, ಶಶಿರಾಜ್, ವೈನ್ ಸ್ಟೋರ್ ರಘುಗೌಡ, ಅನಘ ಸಾಗರ್ ಅಂತಹ ನಟರ ದಂಡೇ ಈ ಚಿತ್ರದಲ್ಲಿ ಇದೆ. ಈ ಅರಿಹ ಸಿನಿಮಾಗೆ ಎಂಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿಪಿಆರ್ ಗೌಡ ಅವರು ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈ ಹೊಸ ಚಿತ್ರ ತಂಡ ಹೊಸದೊಂದು ಪ್ರಯತ್ನ ಮಾಡಲು ಹೊರಟಿದೆ.