ಫೆಬ್ರವರಿ 16ರಂದು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನ. ಪ್ರತಿ ಬಾರಿ ದರ್ಶನ್ ಅವರ ಹುಟ್ಟು ಹಬ್ಬದಂದು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು ದಚ್ಚು ಮನೆ ಬಳಿ ಜಮಾಯಿಸಿ ತನ್ನ ನೆಚ್ಚಿನ ನಟನನ್ನ ಕಣ್ತುಂಬಿಕೊಂಡು ವಿಶ್ ಮಾಡಿ ಜೈಕಾರ ಕೂಗುವುದು ಸಾಮಾನ್ಯವಾಗಿರುತ್ತದೆ. ಅದರಂತೆ ದರ್ಶನ್ ಕೂಡ ತನ್ನ ಅಭಿಮಾನಿಗಳಿಗಾಗಿ ಅಂದು ದಿನಪೂರ್ತಿ ಅವರಿಗಾಗಿಯೇ ಸಮಯ ಮೀಸಲಿಡುತ್ತಾರೆ. ಅದರ ಜೊತೆಗೆ ತಮ್ಮ ಮುಂದಿನ ಸಿನಿಮಾ ತಂಡದಿಂದ ಏನಾದರೊಂದು ಸ್ಪೆಷಲ್ ಗಿಫ್ಟ್ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಅಂತೆಯೇ ಈ ಬಾರಿಯೂ ಕೂಡ ದರ್ಶನ್ ಮುಂದಿನ ಸಿನಿಮಾವಾಗಿರುವ ಕ್ರಾಂತಿ ಚಿತ್ರದ ಟೀಸರ್ ದರ್ಶನ್ ಹುಟ್ಟು ಹಬ್ಬ ಆಗಿರುವ ಫೆಬ್ರವರಿ 16ರಂದು ಲಾಂಚ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೌದು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ. ಈ ಕ್ರಾಂತಿ ಚಿತ್ರವನ್ನು ವಿ.ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿದ್ದ ವಿ.ಹರಿಕೃಷ್ಣ ಅವರು ಯಜಮಾನ ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ದರ್ಶನ್ ಅವರೊಟ್ಟಿಗೆ ಮಾಡಿದ ಯಜಮಾನ ಸಿನಿಮಾ ಸೂಪರ್ ಹಿಟ್ ಆಯಿತು. ಇದೀಗ ಕ್ರಾಂತಿ ಚಿತ್ರ ಮಾಡಲು ಹೊರಟಿದ್ದಾರೆ. ಈ ಕ್ರಾಂತಿ ಸಿನಿಮಾದ ಕೆಲವು ತಿಂಗಳ ಹಿಂದೆಯಷ್ಟೆ ಬೆಂಗಳೂರಿನ ವಿನಾಯಕ ದೇವಾಲಯದಲ್ಲಿ ನೆರೆವೇರಿದೆ. ದರ್ಶನ್ ಅವರ 55ನೇ ಚಿತ್ರವಾಗಿರುವ ಕ್ರಾಂತಿ ಸಿನಿಮಾದ ಟೈಟಲ್ ಲಾಂಚ್ ಆದಾಗಿನಿಂದ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹುಟ್ಟಿದೆ. ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ.

ದರ್ಶನ್ ಅವರ ತೂಗುದೀಪ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಪ್ರವೇಶ ಮಾಡಿದ ರಚಿತಾ ರಾಮ್ ಕ್ರಾಂತಿ ಚಿತ್ರದಲ್ಲಿ ದರ್ಶನ್ ಅವರಿಗೆ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ದರ್ಶನ್ ಅವರೊಟ್ಟಿಗೆ ಹ್ಯಾಟ್ರಿಕ್ ಬಾರಿಸಲಿದ್ದಾರೆ. ಬುಲ್ ಬುಲ್, ಅಂಬರೀಷ ನಂತರ ಇದೀಗ ಕ್ರಾಂತಿ ಚಿತ್ರದ ಮೂಲಕ ಮತ್ತೆ ದರ್ಶನ್ ಅವರಿಗೆ ನಾಯಕಿಯಾಗಿದ್ದಾರೆ. ಇನ್ನು ಈ ಕ್ರಾಂಚಿ ಚಿತ್ರಕ್ಕೆ ವಿ.ಹರಿಕೃಷ್ಣ ಅವರು ನಿರ್ದೇಶನದ ಜೊತೆಗೆ ಮ್ಯೂಸಿಕ್ ಕೂಡ ಮಾಡುತ್ತಿದ್ದಾರೆ. ಯಜಮಾನ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕಿ ಶೈಲಜಾ ನಾಗ್ ಅವರೇ ಕ್ರಾಂತಿ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದಲ್ಲಿ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್, ಸಾಧುಕೋಕಿಲ, ಅಚ್ಯುತ್ ಕುಮಾರ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಸೇರಿದಂತೆ ಬಹುದೊಡ್ಡ ತಾರಾಬಳಗವಿರಲಿದೆ.