ಡಾಲಿ ಧನಂಜಯ್ ನಟಸಿ ನಿರ್ಮಾಣ ಮಾಡಿರುವ ಬಡವ ರಾಸ್ಕಲ್ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ರಾಜ್ಯದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಯಶಸ್ವಿಯಾಗಿರುವ ಬಡವ ರಾಸ್ಕಲ್ ಸಿನಿಮಾ ಬಿಡುಗಡೆಯಾದ ಎಲ್ಲಾ ಥಿಯೇಟರ್ ನಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 24 ರಂದು ಬಿಡುಗಡೆಯಾದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗುವ ಮುನ್ನವೇ ತನ್ನ ಟೀಸರ್, ಟ್ರೇಲರ್ ಮತ್ತು ಹಾಡುಗಳಿಂದ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಉಂಟು ಮಾಡಿತ್ತು. ನಿರೀಕ್ಷೆಗೆ ತಕ್ಕಂತೆ ಸಿನಿಮಾ ಕೂಡ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾಗಿ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಉತ್ತಮ ಗಳಿಕೆ ಮಾಡಿದೆ.
ಗುರು ಶಂಕರ್ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ವಾಸುಕಿ ವೈಭವ್ ಅವರ ಕಂಠದಲ್ಲಿ ಮೂಡಿ ಬಂದಿರುವ ಆಗಾಗ ನೆನಪಾಗುತ್ತಾಳೆ ಹಾಡು ಸದಾ ಗುನುಗುವಂತಿದ್ದು, ಚಿತ್ರದ ಹಾಡುಗಳು ಸಿನಿ ಪ್ರೇಕ್ಷಕರನ್ನ ಮೋಡಿ ಮಾಡಿವೆ. ಧನಂಜಯ್ ನಾಯಕ ನಾಗಿ ನಟಿಸುವುದರ ಜೊತೆಗೆ ಬಡವ ರಾಸ್ಕಲ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ ಧನಂಜಯ್. ಮಧ್ಯಮ ವರ್ಗದ ಆಟೋ ಓಡಿಸುವ ಯುವಕನ ಕಥೆ ಇರುವ ಬಡವ ರಾಸ್ಕಲ್ ಸಿನಿಮಾವನ್ನು ಕನ್ನಡ ಸಿನಿ ಪ್ರೇಕ್ಷಕರು ಕೈ ಹಿಡಿದಿದ್ದಾರೆ. ತಮ್ಮ ನಿರ್ಮಾಣದ ಮೊದಲ ಚಿತ್ರಕ್ಕೆ ಅಭೂತ ಪೂರ್ವ ಯಶಸ್ಸು ದೊರೆಯಲು ಕಾರಣರಾದ ಕನ್ನಡ ಸಿನಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಡಾಲಿ ಧನಂಜಯ್ ಅಂಡ್ ಟೀಂ ರಾಜ್ಯದ ಎಲ್ಲೆಡೆ ವಿಜಯಯಾತ್ರೆ ನಡೆಸುತ್ತಿದ್ದಾರೆ.

ಈಗಾಗಲೇ ನಟ,ನಿರ್ಮಾಪಕ ಧನಂಜಯ್ ಅವರು ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರಿನ ಹಲವು ಚಿತ್ರ ಮಂದಿರಗಳಿಗೆ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇದೀಗ ಉತ್ತರ ಕರ್ನಾಟಕದತ್ತ ಪಯಣ ಬೆಳೆಸಿದ್ದಾರೆ. ಹೋದಲೆಲ್ಲಾ ಧನಂಜಯ್ ಅವರನ್ನು ನೋಡಲ ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ತೆಗೆದುಕೊಂಡು ಜೈ ಕಾರ ಕೂಗುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಕಳೆದ ಎರಡು ವಾರದಲ್ಲಿ ಬರೋಬ್ಬರಿ 15 ಕೋಟಿ ಕಲೆಕ್ಷನ್ ಮಾಡಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ಇಡೀ ಸಿನಿಮಾ ತಂಡ ಫುಲ್ ಖುಷ್ ಆಗಿದ್ದಾರೆ. ಚಿತ್ರದಲ್ಲಿ ನಾಯಕಿ ನಟಿಯಾಗಿ ಅಮೃತಾ ಅಯ್ಯಂಗರ್ ಅಭಿನಯಿಸಿದ್ದಾರೆ. ರಂಗಾಯಣ ರಘು, ತಾರಾ, ನಾಗಭೂಷಣ್ , ಪೂರ್ಣಚಂದ್ರ, ಸ್ಪರ್ಶ ರೇಖಾ, ಜೊತೆಗೆ ವಿಶೇಷ ಪಾತ್ರದಲ್ಲಿ ಮಠ ಚಿತ್ರದ ನಿರ್ದೇಶಕ ಗುರು ಪ್ರಸಾದ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬಡವ ರಾಸ್ಕಲ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆ.