ಸಾಮಾನ್ಯವಾಗಿ ಸಮಾಜದಲ್ಲಿರುವ ಗಣ್ಯವ್ಯಕ್ತಿಗಳು ಆರ್ಥಿಕವಾಗಿ ಸಧೃಡವಾಗಿರುವ ವ್ಯಕ್ತಿಗಳು, ಸಂಸ್ಥೆಗಳು ತಮ್ಮ ಕಂಪನಿ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಒಂದಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತವೆ. ನಟ ಕಿಚ್ಚ ಸುದೀಪ್ ಅವರು ಮೊದಲಿಂದಲೂ ಒಂದಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಇದೀಗ ಹೊಸದೊಂದು ಹೊಣೆಗಾರಿಕೆಯನ್ನು ತಾವು ತೆಗೆದುಕೊಂಡಿದ್ದಾರೆ ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಮತ್ತು ಆ ಶಾಲೆಯ ಮಕ್ಕಳ ಸರ್ವೋತೋಮುಖ ಅಭಿವೃದ್ದಿಗಾಗಿ ಸುದೀಪ್ ಅವರು ಎಂಟು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ, ದತ್ತು ಪಡೆದ ಆ ಸರ್ಕಾರಿ ಶಾಲೆಯ ಸಂಪೂರ್ಣ ಮೂಲಭೂತ ಅವಶ್ಯಕತೆಗಳ ಜವಾಬ್ದಾರಿ ತೆಗೆದುಕೊಂಡು ಶಾಲೆ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಪ್ರಗತಿ ಪರಿಶೀಲನೆ ಮಾಡುವುದಾಗಿದೆ.

ಇದಲ್ಲದೆ ರಾಜ್ಯದ ಹಲವು ಮಂತ್ರಿವರ್ಗದವರೂ ಕೂಡ ಒಂದಷ್ಟು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ.ಅದರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ಪಡೆದರೆ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ 8 ಶಾಲೆಗಳನ್ನು ದತ್ತು ಪಡೆದರೆ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶ್ರೀ ರಾಮುಲು ಕೂಡ ಒಬ್ಬೊಬ್ಬರು ಐದು ಶಾಲೆಗಳನ್ನು ದತ್ತು ಸ್ವೀಕಾರ ಮಾಡಿದರು. ಇದೇ ಸಂಧರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೇವಲ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದು ಮಾತ್ರವಲ್ಲ ಮೂರು ತಿಂಗಳಿಗೊಮ್ಮೆ ಶಾಲೆಯ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.