ಹಿಂದಿನ ದಿನ ಮಾನಗಳಿಗೆ ಹೋಲಿಸಿದರೆ ಈಗಿನ ವಿವಾಹಗಳು, ಇತ್ತೀಚಿನ ದಿನಗಳಲ್ಲಿ ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿವೆ ಎನ್ನಬಹುದು. ಗಂಡ ಹೆಂಡತಿಯರ ನಡುವಿನ ಸಂಬಂಧಗಳು ದಿನೇ ದಿನೇ ಹದಗೆಡುತ್ತಿವೆ. ಗಂಡ ಹೆಂಡತಿಯರ ನಡುವಿನ ಸಂಬಂಧ ಪರಿ ಶುದ್ಧವಾಗಿರುತ್ತದೆ. ಆದರೆ ಈಗ ಲಿವಿಂಗ್ ಟುಗೆದರ್ ರೆಲೇಶನ್ಶಿಪ್ ಎಂಬ ಪಾಶ್ಚಾತ್ಯ ಸಂಸ್ಕೃತಿ ಎಲ್ಲೆಡೆ ಆವರಿಸಿದೆ. ಇದರಿಂದ ನಮ್ಮ ಭಾರತೀಯ ಸಂಸ್ಕೃತಿ ಕ್ಷೀಣಿಸುತ್ತಿದೆ. ವಿವಾಹವೆಂಬ ಪವಿತ್ರವಾದ ಸಂಬಂಧವು ಈಗ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಈಗಿನ ಕಾಲದ ಜನರು ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗಿ ಯಾವ ಯಾವ ರೀತಿ ಸಂದರ್ಭಗಳಿಗೆ ಒಳಗಾಗುತ್ತಿದ್ದಾರೆ ಎಂಬುದನ್ನು ತೋರಿಸಲು ಒಂದು ಚಿತ್ರತಂಡ ಹೊರಟಿದೆ. ವಿವಾಹದ ನಂತರ ಗಂಡ ಹೆಂಡತಿಯ ಸಂಬಂಧ ಪರಿಶುದ್ಧವಾಗಿರುತ್ತದೆ.

ಇವರಿಬ್ಬರ ಸಂಬಂಧದಲ್ಲಿ ಮೂರನೇ ವ್ಯಕ್ತಿಗೆ ಅವಕಾಶವಿರುವುದಿಲ್ಲ. ಆಕರ್ಷಣೆಯೇ ಬೇರೆ ಪ್ರೀತಿಯೇ ಬೇರೆ. ವಿವಾಹವೆನ್ನುವ ಪವಿತ್ರವಾದ ಬಂಧದಲ್ಲಿ ಗಂಡ ಹೆಂಡತಿಯ ಸಂಬಂಧದ ಕಥೆಯನ್ನು ಹೇಳಲು ಹೊರಟಿದೆ ‘ಪರಿಶುದ್ಧಮ್’ ಚಿತ್ರತಂಡ. ಪರಿಶುದ್ಧಮ್ ಚಿತ್ರವು ಮಹಿಳಾ ಪ್ರಧಾನ ಕಥೆಯನ್ನು ಹೊಂದಿದ್ದು, ಆಕರ್ಷಣೆ ಹಾಗೂ ಪ್ರೀತಿಯ ನಡುವಿನ ವ್ಯತ್ಯಾಸವನ್ನು ಉತ್ತಮವಾದ ಸಂದೇಶದ ಮೂಲಕ ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ವೆಂಕಟೇಶ್ ಹೇಳಿದ್ದಾರೆ. ರೋಹನ್ ಕಿಡಿಯಾರ್ ನಾಯಕನಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಸ್ಪರ್ಶ ಚಿತ್ರದ ರೇಖಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಾಯಕ ರೋಹನ್ ಕಿಡಿಯಾರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇವರ ಜೊತೆಗೆ ಕುಮಾರ್ ರಾಥೋಡ್ ಅವರು ಕೂಡ ಬಂಡವಾಳ ಹೂಡಿದ್ದಾರೆ.

ಈ ಚಿತ್ರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ದಿಶಾ ಪೂವಯ್ಯ ಅಭಿನಯಿಸುತ್ತಿದ್ದಾರೆ. ಕೀರ್ತಿ ಕೃಷ್ಣ, ಭಾರ್ಗವ್, ಯತಿರಾಜ್, ವಿಕ್ಟರಿ ವಾಸು, ಕುರಿರಂಗ, ಮೈಸೂರು ರಮಾನಂದ್ ಮುಂತಾದ ತಾರಾಗಣ ಚಿತ್ರದಲ್ಲಿದೆ. ನಿಖಿಲ್ ಅವರು ಈ ಚಿತ್ರಕ್ಕೆ ಸಂಕಲನ ನೀಡುತ್ತಿದ್ದು, ವಿನಯ್ ಮೂರ್ತಿ ಸಂಭಾಷಣೆ ಬರೆದಿದ್ದಾರೆ. ರಾಮದೇವ್ ಅವರ ಸಾಹಸ, ಕಿಶೋರ್ ಅವರ ನೃತ್ಯ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಚಿತ್ರೀಕರಣದ ಕೆಲವು ಭಾಗ ಮುಗಿದಿದ್ದು, ಚಿತ್ರದ ಚಿತ್ರೀಕರಣವು ಬಾಗಲೂರಿನ ಕಂಟ್ರಿಕ್ಲಬ್ ನಲ್ಲಿ ನಡೆದಿದೆ. ಈ ಚಿತ್ರಕ್ಕೆ ಕೃಷ್ಣ ಸಾರಥಿ ಪ್ರೀತಂ ಛಾಯಾಗ್ರಹಣ ನೀಡಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈಗಾಗಲೇ ಮಾತಿನ ಭಾಗದ ಕೆಲಸ ಮುಗಿಸಿದ ಚಿತ್ರತಂಡ ಎಪ್ರಿಲ್ 28ರಂದು ತೆರೆ ಕಾಣಲಿದೆ.